
ಸಿಂದಗಿ: ಭಾರತ ದೇಶದ ಮೂಲ ವೈದ್ಯಕೀಯ ಪದ್ದತಿಯಾದ ಆಯುರ್ವೇದದಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ, ಆಯುರ್ವೇದ ಚಿಕಿತ್ಸೆಯು ಭಾರತದ ಹೆಮ್ಮೆ ಎಂದು ವಿಜಯಪುರ ಬಿ.ಎಲ್.ಡಿ.ಇ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|| ಸಂಜಯ ಕಡ್ಲಿಮಟ್ಟಿ ಹೇಳಿದರು.
ನಗರದ ಬಸವ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಜಯಪುರ ಜಿಲ್ಲಾ ಆಯುಷ್ ಇಲಾಖೆ ಹಾಗೂ ತಾಲೂಕು ಆಯುಷ್ ಘಟಕದ ಸಹಯೋಗದಲ್ಲಿ 7ನೆಯ ರಾಷ್ಟ್ರೀಯ ಆಯುರ್ವೇದ ದಿನಾಚರಣೆ, ಪ್ರತಿ ಮೆನಯಲ್ಲಿ ಪ್ರತಿದಿನ ಆಯುರ್ವೇದ ಘೋಷವ್ಯಾಖ್ಯದಡಿ ಅಡಿಯಲ್ಲಿ ಹಿರಿಯ ನಾಗರಿಕ ಆಯುರ್ವೇದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮಧುಮೇಹ ಕಾಯಿಲೆ ಇದ್ದವರು ನೀಲ ಹಣ್ಣು ಸೇವನೆ ಮಾಡಬಾರದು ಬದಲಾಗಿ ಅದರ ಬೀಜವನ್ನು ಒಣಗಿಸಿ ಪುಡಿ ಮಾಡಿ ತಿನ್ನಬಹುದು. ರೋಗನಿರೋಧಕ ಶಕ್ತಿ ವರ್ಧಿಸಲು ದಿನಾಲೂ ಬೆಳಿಗ್ಗೆ 1 ಚಮಚ ಚ್ಯವನಪ್ರಾಶ, ತುಳಸಿ, ದಾಲ್ಚಿನಿ, ಕರಿಮೆಣಸು, ಒಣಶುಂಠಿ ಹಾಗೂ ದ್ರಾಕ್ಷಿಗಳನ್ನು ಸೇರಿಸಿ ಕಷಾಯ ಮಾಡಿ ದಿನಕ್ಕೆ 2 ಬಾರಿ ಕುಡಿಯಬೇಕು. ಕೊಟ್ಟ ಔಷಧಿಗೆ ಖಾಯಿಲೆ ವಾಸಿಯಾಗಬೇಕೆ ಹೊರತ್ತು ಇನ್ನೊಂದು ಖಾಯಿಲೆ ಉಚಿತವಾಗಿ ನೀಡಬಾರದು, ಆದ್ದರಿಂದ ಜನರಲ್ಲಿ ಆಯುರ್ವೇದ ಔಷಧ ನಿಧಾನಗತಿಯಲ್ಲಿ ರೋಗ ನಿವಾರಣೆ ಮಾಡುತ್ತದೆ ತಾತ್ಸರ ಬೇಡ, ಆಯುರ್ವೇದ ಔಷಧ ಖಾಯಿಲೆ ವಾಸಿಮಾಡುವುದು ನಿಧಾನವಾದರೂ ಅದನ್ನು ಬುಡಸಮೇತ ವಾಸಿಮಾಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ರಮೇಶ ಭೂಸನೂರ ಉದ್ಘಾಟಿಸಿ ಮಾತನಾಡಿ, ಸಮಗ್ರ ಆರೋಗ್ಯಕ್ಕಾಗಿ ಆಯುರ್ವೇದ, ಸಹಸ್ರಮಾನಗಳಿಗೆ ಆಯುರ್ವೇದ, ಆಯುರ್ವೇದ ಆಹಾರ, ಹಿರಿಯ ನಾಗರಿಕರಿಗಾಗಿ ಆಯುರ್ವೇದ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ವೇಳೆ ಡಾ|| ಶ್ರೀಶೈಲ ಪಾಟೀಲ ಮಾತನಾಡಿ, ದೇಶದಲ್ಲಿ ಆಯುರ್ವೇದ ವೈದ್ಯಕೀಯ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಆಯುಷ್ ವೈದ್ಯಕೀಯ ಶಿಕ್ಷಣ ಇಂದು ಅತ್ಯಂತ ಮಹತ್ವದ ಸ್ಥಾನದಲ್ಲಿದೆ. ಆಯುರ್ವೆದ ಚಿಕಿತ್ಸೆಗೆ ಪ್ರಾಚೀನ ಕಾಲದಿಂದ ಮಾನವನ ಆರೋಗ್ಯ ರಕ್ಷಣೆ ಸಂಜೀವಿನಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದೆ. ಆಯುರ್ವೆದ ಪದ್ಧತಿ ಪ್ರಚಂಚದ ಎಲ್ಲ ರಾಷ್ಟ್ರಗಳು ಇಂದು ಅನುಕರಣೆ ಮಾಡುತ್ತಿರುವುದು ಭಾರತೀಯ ವೈದ್ಯಕೀಯ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ.
ಇದೇ ಸಂದರ್ಭದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಾ|| ಮಹಾಂತೇಶ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ|| ಶಿವಾನಂದ ಹೊಸಮನಿ, ಡಾ|| ಮೋನೇಶ ಬಡಿಗೇರ, ಡಾ|| ನಾನಾಸಾಬ ದೇಶಮುಖ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ಮಹಾಂತೇಶ ಪಟ್ಟಣಶೆಟ್ಟಿ, ಜಗದಿಶ ಶುಂಠಿ, ಆರ್.ಎಂ.ಬಿರಾದಾರ, ಶಿವಯೋಗೆಪ್ಪ ಗುಣಾರಿ, ವಿಶ್ವನಾಥ ಜೋಗುರ, ಸಿ.ಎಮ್.ಪೂಜಾರ, ರವಿ ಕಟಕೆ, ಶಿವಾನಂದ ಕಲಬುರ್ಗಿ, ಆರ್.ಆರ್.ಪಾಟೀಲ್, ಡಾ|| ಸೀಮಾ ವಾರದ, ಎನ್ಸಿಡಿ ಆಪ್ತ ಸಮಾಲೋಚಕಿ ಮಡಿವಾಳಮ್ಮ ಹಿರೇಮಠ, ಹಿರಿಯ ನಾಗರಿಕರು ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೋಂಡಿದ್ದರು.
ಡಾ|| ಮಹಾಂತೇಶ ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ|| ಪ್ರಕಾಶ ಮೂಡಲಗಿ ಪ್ರಾರ್ಥಿಸಿದರು. ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿ ರಾಜಶೇಖರ ನರಗೋದಿ ನಿರೂಪಿಸಿ ವಂದಿಸಿದರು.

