ಸಿಂದಗಿ: ಪಟ್ಟಣದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಸಿಂದಗಿ ಕೆರೆ ಸೌಂದರ್ಯೀಕರಣ ಕಾರ್ಯಕ್ಕೆ ಶಾಸಕ ಅಶೋಕ ಮನಗೂಳಿ ನಿರಂತರ ಶ್ರಮ ವಹಿಸುತ್ತಿದ್ದಾರೆ. ಈ ಯೋಜನೆಯು ಅವರ ತಂದೆ, ದಿವಂಗತ ಎಂ.ಸಿ. ಮನಗೂಳಿ ಅವರು ಕಂಡಿದ್ದ ಕನಸಿನ ಕೂಸಾಗಿದ್ದು, ಇದೀಗ ಸಾಕಾರಗೊಳ್ಳುವ ಹಂತ ತಲುಪಿದೆ.
ಕೆರೆ ಸೌಂದರ್ಯೀಕರಣದಿಂದ ಪರಿಸರ ಸಂರಕ್ಷಣೆ, ಸಾರ್ವಜನಿಕರಿಗೆ ವಿಹಾರ ತಾಣ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪಟ್ಟಣದ ಸೌಂದರ್ಯ ಹೆಚ್ಚಳಕ್ಕೆ ಉತ್ತೇಜನ ದೊರೆಯಲಿದೆ. ಅಲ್ಲದೆ, ಸಿಂದಗಿ ಪಟ್ಟಣಕ್ಕೆ ಹೊಸ ಗುರುತನ್ನು ತಂದುಕೊಡುವ ಯೋಜನೆಯಾಗಿ ಇದು ರೂಪುಗೊಳ್ಳುತ್ತಿದೆ.
ದಿವಂಗತ ಎಂ.ಸಿ. ಮನಗೂಳಿ ಅವರು ಸಚಿವರಾಗಿದ್ದ ಅವಧಿಯಲ್ಲಿ ಕೆರೆ ಅಭಿವೃದ್ಧಿಗಾಗಿ ತೋಟಗಾರಿಕೆ ಇಲಾಖೆಯಿಂದ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿತ್ತು. ನಂತರ ಶಾಸಕ ಅಶೋಕ ಮನಗೂಳಿ ಅವರ ಅವಧಿಯಲ್ಲಿ ನಗರ ಯೋಜನಾ ಪ್ರಾಧಿಕಾರದಿಂದ 53 ಲಕ್ಷ ರೂಪಾಯಿ ಅನುದಾನ ದೊರೆತಿದ್ದು, ಇದೀಗ ರಾಜ್ಯ ಸರ್ಕಾರದಿಂದ 3.04 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ.
ಸಿಂದಗಿ ಜನರ ಬಹುದಿನಗಳ ಕನಸಾಗಿದ್ದ ಕೆರೆ ಅಭಿವೃದ್ಧಿ ಯೋಜನೆಗೆ ಜೀವ ತುಂಬುತ್ತಿರುವ ಶಾಸಕ ಅಶೋಕ ಮನಗೂಳಿ ಅವರ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
