
ಮುದ್ದೇಬಿಹಾಳ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಮುದ್ದೇಬಿಹಾಳ ತಾಲೂಕಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.
ಕವಡಿಮಟ್ಟಿ ಗ್ರಾಮದಲ್ಲಿ 2020-21ನೇ ಸಾಲಿನಲ್ಲಿ ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು. ಮುಕ್ತಾಯವಾದ ಕಾರಣ ಆದಷ್ಟು ತುರ್ತಾಗಿ ವಿಶೇಷ ಗ್ರಾಮ ಸಭೆ ಜರುಗಿಸಿ ಕಾಮಗಾರಿಯನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸಿಇಓ ಅವರು ಸೂಚನೆ ನೀಡಿದರು.
ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕಿನ 343 ಗ್ರಾಮೀಣ ಜನವಸತಿಗಳು ಹಾಗೂ 6 ಪುರಸಭೆಗಳಿಗೆ ಕುಡಿಯುವ ನೀರು ಒದಗಿಸುವ ಕಾಮಗಾರಿ 2022-23ನೇ ಸಾಲಿನ ಜಲಧಾರೆ ಯೋಜನೆಯಡಿ ಮಂಜೂರಾಗಿದ್ದು, ನಾರಾಯಣಪುರ ಜಲಾಶಯದ ಹಿನ್ನೀರಿನ ಹತ್ತಿರ ಜಾಕ್ವೆಲ್ ನಿರ್ಮಿಸಲು ಯೋಜಿಸಿದ ಕಾಮಗಾರಿಯ ಸ್ಥಳವನ್ನು ಸಿಇಓ ಅವರು ಇದೆ ವೇಳೆ ಪರಿಶೀಲಿಸಿದರು. ಸ್ಥಳದಲ್ಲಿ ಹಾಜರಿದ್ದ ಗುತ್ತಿಗೆದಾರರ ಪ್ರತಿನಿಧಿಗಳಿಗೆ 343 ಗ್ರಾಮೀಣ ಜನವಸತಿಗಳು ಹಾಗೂ 6 ಪುರಸಭೆಗಳ ವ್ಯಾಪ್ತಿಯ ಮನೆಗಳ ಸರ್ವೆ ಕಾರ್ಯವನ್ನು ತುರ್ತಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚಿಸಿದರು.ಮತ್ತು ಕಾಮಗಾರಿಯೊಂದರ ಸ್ಥಳ ಗುರುತಿಸಲು ತುರ್ತಾಗಿ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳಿಂದ ಅನುಮತಿ ಪಡೆದು ಸಮೀಕ್ಷೆ ಕಾರ್ಯ ಪ್ರಾರಂಭ ಮಾಡಲು ಸೂಚಿಸಿದರು.

ಇದೇ ವೇಳೆ ನಾಗರಬೆಟ್ಟ ಗ್ರಾಮದ ಗುಡ್ಡದ ಹತ್ತಿರ ಸರ್ವೆ ನಂ.51 ರಲ್ಲಿ ನಿರ್ಮಿಸಲಾಗುವ 101 ಎಮ್.ಎಲ್.ಡಿ ನೀರು ಶುದ್ಧೀಕರಣ ಘಟಕದ ಕಾಮಗಾರಿಯ ಸ್ಥಳ ವೀಕ್ಷಿಸಿದರು. ಈ ಕಾಮಗಾರಿಯೊಂದಿಗೆ ವಿದ್ಯುತ್ ಲೈನ್ ಒದಗಿಸುವ ಕಾಮಗಾರಿಯ ಅಂದಾಜು ಪತ್ರಿಕೆಯನ್ನು ಸಂಬAಧಪಟ್ಟ ಅಧಿಕಾರಿಗಳಿಂದ ಪಡೆದು ಕಾಮಗಾರಿಯನ್ನು ನಿರ್ವಹಿಸಲು ಸೂಚನೆ ನೀಡಿದರು.

ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿರುವ ಕಾರಣ ಬೇಸಿಗೆ ಕಾಲದಲ್ಲಿ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುವ ಪರಿಸ್ಥಿತಿ ತಪ್ಪಿಸಲು ಕೊನೆಯ ಹಳ್ಳಿಯವರೆಗೆ ನೀರು ಒದಗಿಸಲು ಯೋಜನಾ ನಕ್ಷೆಯನ್ನು ತಯಾರಿಸಲು ಸಿಇಓ ಅವರು ಸೂಚಿಸಿದರು. ನಿಗದಿತ ಯೋಜನಾ ಅವಧಿಯಲ್ಲಿಯೇ ಕಾಮಗಾರಿಯನ್ನು ಮುಕ್ತಾಯಗೊಳಿಸಲು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾದ ಚಂದ್ರಶೇಖರ ಚವ್ಹಾಣ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜೆ.ಪಿ.ಪಟ್ಟಣಶೆಟ್ಟಿ, ಕಿರಿಯ ಎಂಜನಿಯರರಾದ ಎನ್.ಬಿ.ನಾಯಕ, ಕವಡಿಮಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪಿ.ಎಸ್.ಕಸನಕ್ಕಿ ಹಾಗೂ ಇತರರು ಹಾಜರಿದ್ದರು.
