
ಸಿಂದಗಿ : ಸಮಾಜದಲ್ಲಿ ಪ್ರತಿಯೊಬ್ಬರು ಮಠ, ಮಂದಿರಗಳಲ್ಲಿ ಹಮ್ಮಿಕೊಳ್ಳುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು ವೆಂಕಟೇಶ ಗುತ್ತೇದಾರ ಹೇಳಿದರು.
ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ 45ನೇ ವರ್ಷದ ಲಿಂ.ಷ.ಬ್ರ.ರುದ್ರಮುನಿ ಶಿವಾಚಾರ್ಯರ ಪುಣ್ಯರಾಧನೆ ನಿಮಿತ್ತ ಶನಿವಾರದಂದು ಹಮ್ಮಿಕೊಂಡ ಯಲ್ಲಾಲಿಂಗ ಮಹಾರಾಜರ ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ವಿವಿಧ ಜಾತಿ, ಧರ್ಮ, ಮತ, ಜನಾಂಗದ ಮಧ್ಯೆ ಭಾವೈಕ್ಯತೆ ಹಾಗೂ ಸೌಹಾರ್ದತೆ ಮೂಡಿಸಲು ಪುರಾಣ, ಪ್ರವಚನ ಕಾರ್ಯಕ್ರಮಗಳು ಅವಶ್ಯಕ. ಕೃಷಿ ಪ್ರಧಾನವಾದ ನಾಡಿನಲ್ಲಿ ಸಂಪ್ರದಾಯ, ಧರ್ಮಾಚರಣೆಗಳು, ಪುರಾಣ ಪ್ರವಚನ ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಧಾರ್ಮಿಕ ಸಂಸ್ಕಾರ, ನೈತಿಕ ಮೌಲ್ಯಗಳನ್ನು ಮನವರಿಕೆ ಮಾಡುವುದು ಅವಶ್ಯಕವಾಗಿದೆ ಎಂದು ಉದ್ದಿಮೆದಾರ ವೆಂಕಟೇಶ ಆರ್. ಗುತ್ತೇದಾರ ಹೇಳಿದರು.
ಇದೇ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿ, ತಂದೆ ತಾಯಿ ಕಲಿಸುವ ಸಂಸ್ಕಾರ, ಗುರು ಕಲಿಸುವ ವಿದ್ಯೆ ಸಮಾಜ ಕಲಿಸುವ ಬದುಕುವ ಕಲೆ, ನಾವು ಯಾವ ರೀತಿಯಾಗಿ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ರುಪುಗೊಳ್ಳುತ್ತದೆ. ಮಠ ಮಂದಿರಗಳಲ್ಲಿ ಇಂತಹ ಆದ್ಯಾತ್ಮಿಕ ಚಿಂತನೆ, ಮಹಾಪುರುಷರ ಜೀವನ ಚರಿತ್ರೆಯ ಪುರಾಣ ಪ್ರವಚನದ ಮೂಲಕ ಆದ್ಯಾತ್ಮಿಕ ಚಿಂತನೆ ಮೂಡುತ್ತದೆ ಎಂದರು.

ಶ್ರೀ ವೆ.ಮೂ. ಶರಣಯ್ಯ ಶಾಸ್ತ್ರೀಗಳು ಮುಗಳಖೋಡ ಯಲ್ಲಾಲಿಂಗ ಮಹಾರಾಜರ ಜೀವನ ಸಾಧನೆ ಕುರಿತು ಪುರಾಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ವೇದಿಕೆಯ ಮೇಲಿ ಮಳ್ಳಿ ಹಿರೇಮಠದ ಷ.ಬ್ರ.ರುದ್ರಮುನಿ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಮುದೋಳ ಕಡಕೋಳ ಹಿರೇಮಠದ ವೆ. ಮೂ. ರಾಜಗುರು ಮಹಾಲಿಂಗ ಸ್ವಾಮಿಗಳು, ಕೋರವಾರ ಚೌಕಿಮಠದ ಷ.ಬ್ರ. ಮುರಗೇಂದ್ರ ಮಹಾಸ್ವಾಮಿಗಳು, ಖಾನಾಪುರ ಶ್ರೀಮಠದ ವೆ. ಮೂ. ಮೌನಯೋಗಿ ಕಲ್ಯಾಣದಯ್ಯಸ್ವಾಮಿಗಳು, ಹೊನ್ನಳ್ಳಿ ವಿರಘಂಟೇಶ್ವರ ಮಠದ ವೆ. ಮೂ. ಗುರುಲಿಂಗಯ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಯಂಕAಚಿ ಹಿರೇಮಠದ ಷ.ಬ್ರ ಅಭಿನವ ರುದ್ರಮುನಿ ಶಿವಾಚಾರ್ಯರ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ನೆರವೇರಲಿವೆ.
ಇದೇ ಸಂದರ್ಭದಲ್ಲಿ ಬಸವರಾಜ ಡಾಗ್ಗ, ಮಹೇಶ ಹಿರೇಮಠ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

