
ಸಿಂದಗಿ : ಸನಾತನ ಧರ್ಮದ ಉಳಿವಿಗಾಗಿ ಉದಯಿಸಿದ ಸಾಲೋಟಗಿಯ ಶ್ರೀ ಶಿವಯೋಗಿ ಶಿವಾಚಾರ್ಯ ರಚಿತ ಸಿದ್ಧಾಂತ ಶಿಖಾಮಣಿಯು ಮನುಜ ಕುಲದ ಸದ್ಗತಿಗೆ ಶ್ರೇಷ್ಠ ಮಾರ್ಗವಾಗಿದೆ ಎಂದು ಕಾಶೀಪೀಠದ ಶ್ರೀಮತ್ ಕಾಶೀ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.
ರವಿವಾರ ಸಂಜೆ ಸಾರಂಗಮಠದಲ್ಲಿ ಸುದ್ದಿಗೋಷ್ಠಿ ನಡೆಸಿ, ಸಿದ್ಧಾಂತ ಶಿಖಾಮಣಿಯಲ್ಲಿನ ಆರು ಸ್ತರಗಳಲ್ಲಿರುವ ಗ್ರಂಥವನ್ನು ನೂರೊಂದು ಸ್ತರಗಳಿಗೆ ವಿಸ್ತರಿಸಿ ಸಾಮಾನ್ಯನನ್ನು ಶಿವನ ಸಾಮಿಪ್ಯಕ್ಕೇರಿಸುವ ಸಿದ್ಧಾಂತ ಸಿದ್ಧಿಯನ್ನು ಈ ಗ್ರಂಥ ಹೊಂದಿದೆ.ಇದು ವಿಶ್ವದ 20ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿ ಸಹಜ ಸಿದ್ಧಾಂತದ ದರ್ಶನವಿದೆ. ಉತ್ತರಭಾರತ, ದಕ್ಷಿಣ ಭಾರತದೆಲ್ಲೆಡೆಯೂ ಗ್ರಂಥ ಪಾರಾಯಣ, ಪ್ರವಚನಗಳನ್ನು ನಡೆಸಲಾಗಿದೆ. ಕಳೆದ 50 ವರ್ಷಗಳಿಂದ ನಾನು ನನ್ನ ಪೂರ್ವಾಶ್ರಮಕ್ಕೂ ಮೊದಲಿನಿಂದಲೂ ಸಿದ್ಧಾಂತ ಶಿಖಾಮಣಿಯನ್ನು ಅಧ್ಯಯನಿಸಿ ಪಿಎಚ್ಡಿ ಪಡೆದಿರುವೆ ಎಂದರು.
ಈ ಗ್ರಂಥವು ದ್ವೈತ್ , ಅದ್ವೈತ ಸಂಘರ್ಷದ ಶಾಸ್ತ್ರಗಳನ್ನು ಒಳಗೊಂಡಿಲ್ಲ. ಇದು ಸಮನ್ವಯ ಸಿದ್ಧಾಂತದ ದಾರ್ಶನಿಕ ಪ್ರಪಂಚದ ಉನ್ನತ ಜೀವನ ಕ್ರಮಗಳ ಸಾಧನಾ ಮೆಟ್ಟಿಲನ್ನು ಹೊಂದಿದೆ. ವಿಜಯಪುರದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳು, ಹುಲ್ಯಾಳದ ಶಂಭುಲಿಂಗ ಸ್ವಾಮಿಗಳು ಸಿದ್ಧಾಂತ ಶಿಖಾಮಣಿ ಹಾಗೂ ಭಗವದ್ಗೀತೆಯ ಪ್ರವಚನಸಾರವನ್ನು ನಾಡಿನ ಜನರಿಗೆ ಅರ್ಥೈಸಿದ್ದಾರೆ. ಶಿವಯೋಗಿ ಶಿವಾಚಾರ್ಯರು ಯೋಗ ಸಿದ್ಧಿಕರು. ವೇದ, ಆಗಮಗಳ ತಳ ಅಧ್ಯಯನ ಮಾಡಿದ್ದರು ಎಂದು ಹೇಳಿದರು.
shivacharyaru
ಡಾ.ಜಚನಿ ಅವರ ಉಲ್ಲೇಖದಂತೆ 5-6 ನೇ ಶತಮಾನದಲ್ಲಿ ಶಂಕರಾಚಾರ್ಯರ ಪೂರ್ವದಲ್ಲೂ ಸನಾತನ ಧರ್ಮೀಯರು ಧರ್ಮ ತೊರೆದು ಹೊರಟಿದ್ದ ವೇಳೆ ವೀರಶೈವ ಧರ್ಮದ ಉಳಿವಿಗಾಗಿ ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿಯನ್ನು ಬರೆದರು ಎಂಬುದು ತಿಳಿದು ಬರುತ್ತದೆ. ಅಲ್ಲದೇ ಈ ಗ್ರಂಥದ ಮೂಲ ಕರ್ತೃಗಳು ಸಾಲೋಟಗಿಯ ಶಿವಯೋಗಿ ಶಿವಾಚಾರ್ಯರು ಎನ್ನುವುದಕ್ಕೆ ಪೂರಕ ದಾಖಲೆಗಳು ಸಿಗುತ್ತವೆ ಎಂದರು.
ಸಿದ್ಧಾಂತ ಶಿಖಾಮಣಿ ಗ್ರಂಥದ ಡಿಜಿಟಲ್ ರೂಪವು ಸಿದ್ಧಗೊಂಡಿದ್ದು, ಕಾಶೀ ಜಂಗಮವಾಡಿ ಮಠದ ಗ್ರಂಥಾಲಯದಲ್ಲಿದೆ. ಈ ಗ್ರಂಥದ ಪಾರಾಯಣದ ಆಡಿಯೋ ಕೂಡ ವೆಬ್ಸೈಟ್ನಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಕೊಣ್ಣೂರ ಮಠದ ವಿಶ್ವಪ್ರಭುದೇವ ಶಿವಾಚಾರ್ಯರು, ಶಾಖಾಪೂರ ಶ್ರೀಗಳು, ಡೋಣೂರ ಮಠದ ಶ್ರೀಗಳು, ವಿಜಯಪುರದ ಶ್ರೀಗಳು ಸೇರಿದಂತೆ ಭಕ್ತವರ್ಗದವರಿದ್ದರು.

