
ಸಿಂದಗಿ: ಪಟ್ಟಣದ ವಿವಿಧ ವಾರ್ಡಿನಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಕಲ್ಯಾಣಕ್ಕಾಗಿ ಕಾಯ್ದಿರಿಸಿದ್ದ ಸನ್ 2021-22ರ ಮೀಸಲು ಅನುದಾನದಲ್ಲಿ ನಡೆದಿರುವ ಕಾಮಗಾರಿಗಳ ಪರಿಶೀಲನೆ ಕುರಿತಂತೆ ಮಂಗಳವಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿ.ವಾಯ್.ಎಸ್.ಪಿ ಸುನೀಲ ಕಾಂಬಳೆ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಇಲ್ಲಿನ 7,15,18 ಹಾಗೂ 22ನೇ ವಾರ್ಡನಲ್ಲಿ ನಡೆದಿರುವ ಬೋರವೆಲ್, ಪೈಪಲೈನ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ವೇಳೆ ಸ್ಥಳೀಯ ನಿವಾಸಿಗಳು ಸ್ವಚ್ಛತೆ, ಒಳಚರಂಡಿ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಮೌಖಿಕ ಅಹವಾಲು ಸಲ್ಲಿಸಿದರು.

ದಲಿತ ಮುಖಂಡ ಅಶೋಕ ಸುಲ್ಪಿ, ವಾರ್ಡಿನಲ್ಲಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಮೀಸಲು ಅನುದಾನ ಎಲ್ಲೆಂದರಲ್ಲಿ ಬಳಕೆ ಮಾಡುವ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರು ದಲಿತರಿರುವ ವಾರ್ಡಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ದುರ್ವಾಸನೆ ಬೀರುವ ಚರಂಡಿಗಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸೊಳ್ಳೆಗಳ ನಿಯಂತ್ರಣಕ್ಕೆ – ಫಿಗಿಂಗ್ ಕೂಡ ಮಾಡಿಸಿಲ್ಲ. ಈ ಕಾಲನಿಗಳು ಅಸಡ್ಡೆಗೆ ಒಳಗಾಗಿವೆ ಎಂದು ದೂರಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ವಾಯ್.ಎಸ್.ಪಿ ಸುನೀಲ ಕಾಂಬಳೆ, 2021 ಮತ್ತು 2022 ರಲ್ಲಿ ಎಸ್ಸಿ, ಎಸ್ಟಿ ಅನುದಾನದಲ್ಲಿ ನಡೆದ ಕಾಮಗಾರಿಗಳ ಹಾಗೂ ಅನುದಾನದ ಬೇಕಾಬಿಟ್ಟಿ ದುರ್ಬಳಕೆ ಕುರಿತು ಬಂದ ದೂರುಗಳನ್ನು ಆಧರಿಸಿ, ಇಲ್ಲಿನ ನಾಲ್ಕು ವಾರ್ಡಗಳಲ್ಲಿ ಕಾಮಗಾರಿಗಳನ್ನು ಪರಿಶೀಲಿಸಿದ್ದೇವೆ. ಪುರಸಭೆಯ ಅಧಿಕಾರಿಗಳಿಗೆ ಈ ವಾರ್ಡಿನ ಸ್ವಚ್ಛತೆ ಹಾಗೂ ಸ್ಥಳೀಯರ ಇತರ ದೂರುಗಳ ಬಗ್ಗೆ ಕ್ರಮವಹಿಸುವಂತೆ ಸೂಚಿಸಲಾಗಿದ್ದು, ಮುಂದಿನ ತನಿಖೆಗಾಗಿ ನಮ್ಮ ವಿಭಾಗದ ಎಡಿಜಿ ಅವರಿಗೆ ಪರಿಶೀಲನೆ ಕುರಿತ ವರದಿಯನ್ನು ಸಲ್ಲಿಸಲಾಗುತ್ತದೆ ಎಂದರು.
ಪಿಎಸ್ಐ ಎಂ.ಜಿ.ಭೋಸಲೆ, ಸಿಬ್ಬಂದಿಗಳಾದ ಎಂ.ಪಿ.ಪತ್ತಾರ, ಎಂ.ಎಂ.ಉಮದಿ ಹಾಗೂ ಸಂಪತ್ ಮೇಲಿಕರ, ಪುರಸಭೆ ಅಭಿಯಂತರ ನಿಂಗರಾಜ ಗುಡಿಮನಿ ಸೇರಿದಂತೆ ಸ್ಥಳೀಯ ನಿವಾಸಿಗಳಿದ್ದರು.

