
ವಿಜಯಪುರ : ಕೋಪ, ದ್ವೇಷ ಮತ್ತು ಇನ್ನೀತರ ಯಾವುದೋ ಕಾರಣದಿಂದ ಕಾರಾಗೃಹಕ್ಕೆ ಬರುವ ಬಂದಿಳಿಗೆ ಮನ ಪರಿವರ್ತನೆಗೆ ಅವಕಾವಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವೆಂಕಣ್ಣ ಬಿ.ಹೊಸಮನಿ ಅವರು ಹೇಳಿದರು.
ಕಾರಾಗೃಹ ಮತ್ತು ಸುಧಾರಣಾ ಸೇವಾ ಕೇಂದ್ರ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 2ರಂದು ಕೇಂದ್ರ ಕಾರಾಗೃಹದಲ್ಲಿ ನಡೆದ ಕಲಿಕೆಯಿಂದ ಬದಲಾವಣೆ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಕ್ತಿಯ ವರ್ತನೆಯಲ್ಲಾಗುವ ಪರಿವರ್ತನೆಯೇ ಕಲಿಕೆಯಾಗಿದೆ. ಕಲಿಕೆಯಿಂದ ಬದಲಾವಣೆ ಸಾಧ್ಯವಿದೆ. ಯಾರು ಕೂಡ ಹಿಂಸೆಯಲ್ಲಿ ತೊಡಗಬಾರದು. ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಗುರುತಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, ತಪ್ಪಿನ ಅರಿವಾದರೆ ಅದೇ ಜೀವನ. ನಮ್ಮ ದೇಶದಲ್ಲಿ ಶೇ.30ರಷ್ಟು ಜನರಿಗೆ ಸಾಕ್ಷರತೆ ಇಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಕಾರಾಗೃಹ ಮತ್ತು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮವು ಶ್ಲಾಘನೀಯವಾದುದು ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ಧಿ ಅವರು ಮಾತನಾಡಿ, ಯಾವುದೇ ಕಾರಣದಿಂದ ತಾವು ಜೈಲಿಗೆ ಬಂದಿರುತ್ತೀರಿ. ಇಲ್ಲಿಂದ ಬದಲಾವಣೆಯಾಗಿ ಹೋಗುವುದೇ ಜೀವನವಾಗಿದೆ. ಜೈಲು ಬಂದಿಗಳು ಸಾಕ್ಷರರಾಗಬೇಕು. ಶಿಕ್ಷಣದಿಂದ ಮಾತ್ರ ಪರಿಪೂರ್ಣ ಜೀವನ ಸಾಧ್ಯವಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ.ಐ.ಜೆ.ಮ್ಯಾಗೇರಿ ಅವರು ಮಾತನಾಡಿ, ವಿಜಯಪುರ ಕಾರಾಗೃಹದ 320 ಬಂದಿಗಳು ಸಾಕ್ಷರತಾ ಪರೀಕ್ಷೆಯಲ್ಲಿ ಪಾಸಾಗಿ ಶೇ.100 ಫಲಿತಾಂಶ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.

ಕಾರಾಗೃಹ ಸಂಕೀರ್ಣವಾದ ಸ್ಥಳವಾಗಿದೆ. ಬೇರೆ ಬೇರೆ ರೀತಿಯ ವ್ಯಕ್ತಿತ್ವ ಹೊಂದಿದವರು ಇಲ್ಲಿರುತ್ತಾರೆ. ಜೈಲು ಬಂದಿಗಳಿಗೆ ಪೊಲೀಸ್ ಇಲಾಖೆ ತಂದೆಯAತಿದ್ದರೆ, ಕಾರಾಗೃಹ ತಾಯಿಯಂತಿರುತ್ತದೆ. ಕಾನೂನು ಸಂಘರ್ಷ ಮಾಡಿ ಜೈಲಿಗೆ ಬಂದವರನ್ನು ಶ್ರೀಮಂತಿ ಬಡವ ಎನ್ನದೇ ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ ಎಂದು ತಿಳಿಸಿದರು.
ಸಮಾಜ ನಮ್ಮನ್ನು ಹೊರಹಾಕಿದೆ ಎನ್ನುವ ಜೈಲು ಬಂದಿಗಳ ಮನಸನ್ನು ಪರಿವರ್ತಿಸಿ ಮತ್ತೆ ಅವರನ್ನು ಅದೇ ಸಮಾಜಕ್ಕೆ ಕಳುಹಿಸುವ ಸವಾಲಿನ ಕೆಲಸವನ್ನು ತಾವು ಸೇರಿದಂತೆ ಕಾರಾಗೃಹದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡುತ್ತಿರುವುದಾಗಿ ತಿಳಿಸಿದರು.
ನಾವು ಮೊದಲು ಎಲ್ಲರನ್ನು ಮನುಷ್ಯರನ್ನಾಗಿ ನೋಡಬೇಕು. ಯಾರೇ ಇರಲಿ ಅವರನ್ನು ನಾವು ಗೌರವಿಸಿದರೆ ಅವರು ನಮ್ಮನ್ನು ಗೌರವಿಸುತ್ತಾರೆ. ಈ ಮನೋಭಾವದೊಂದಿಗೆ ನಮ್ಮ ಸಿಬ್ಬಂದಿಯ ದೃಷ್ಟಿಕೋನವನ್ನು ಬದಲಾಯಿಸಲು ನಾನಾ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಅಧಿಕಾರಿ ಟಿ.ಎಸ್.ಅಲಗೂರ ಅವರು ಮಾತನಾಡಿ, ಇಲ್ಲಿ ಯಾರು ಶ್ರೇಷ್ಟರಲ್ಲ, ಬದಲಾವಣೆ ಜಗದ ನಿಯಮ ಎಂಬುದನ್ನು ನೆನಪಿಡಬೇಕು. ಒಳ್ಳೆಯದನ್ನು ಮಾಡಿ ಮರೆತು ಬಿಡುವ, ಹೀಯಾಳಿಸಿದ್ದನ್ನು ಮರೆಯುವ ತತ್ವಗಳನ್ನು ಪಾಲನೆ ಮಾಡಬೇಕು. ನಾವೆಲ್ಲರು ಕೇವಲ ಒಬ್ಬ ಸಾಮಾನ್ಯ ಮನುಷ್ಯರು. ದ್ವೇಷ ಮಾಡಬಾರದು. ನಗುತ್ತ ಜೀವನ ಸಾಗಿಸಬೇಕು. ಬಣ್ಣದಲ್ಲಿ ಬದುಕಿಲ್ಲ, ಬದಲಾಗಿ ಬದುಕಲ್ಲಿ ಬಣ್ಣವಿದೆ ಎಂದು ತಿಳಿದು ನಡೆಯಬೇಕು ಎಂದು ತಿಳಿಸಿದರು.

ಸಹಾಯಕ ಅಧೀಕ್ಷಕರಾದ ಮಂಜುನಾಥ ಹೆಚ್.ಜಿ.ಅವರು ಪ್ರಾಸ್ತಾವಿಕ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಉಮೇಶ ಶಿರಹಟ್ಟಿಮಠ, ಡಯಟ್ನ ಪ್ರಾಂಶುಪಾಲರಾದ ಅಶೋಕ ಕಲಘಟಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ, ಕೇಂದ್ರ ಕಾರಾಗೃಹದ ಆರಕ್ಷಕ ನಿರೀಕ್ಷಕರಾದ ಯಲ್ಲಪ್ಪ ಬೈಲಕೂರ, ಜೈಲರ್ಗಳಾದ ತಿಲೋತ್ತಮ, ಐ.ಎಸ್.ಹಿರೇಮಠ, ಎನ್.ಆರ್.ಚೇತನಾ ಉಪಸ್ಥಿತರಿದ್ದರು. ಶಹೀನಾಬೇಗಂ ನದಾಫ್ ನಿರೂಪಿಸಿದರು. ಶಿಲ್ಪಾ ಗಾಣಿಗೇರ ಪ್ರಾರ್ಥಿಸಿದರು. ಡಿ.ವಿ.ರಾಜೇಶ ಸ್ವಾಗತಿಸಿದರು. ಜಿ.ಕೆ.ಕುಲಕರ್ಣಿ ವಂದಿಸಿದರು.
