
ಸಿಂದಗಿ: ಜನರ ಬಾಯಿಂದ ಬಾಯಿಗೆ ಹರಿದು ಬಂದ ಜನಪದ ಸಾಹಿತ್ಯ, ಜನರ-ಪದವಾಗಿ ಹೊರಹೊಮ್ಮಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಜನಪದವೇ ಮೂಲ ಆಧಾರ. ಜನಪದ ಕನ್ನಡ ನಾಡಿನ ಸಂಸ್ಕೃತಿಯ ಪ್ರತಿಬಿಂಬ ಎಂದು ಶಾಸಕ ರಮೇಶ ಭೂಸನೂರ ಅಭಿಪ್ರಾಯಪಟ್ಟರು.
ನಗರದ ಬಸವ ಮಂಟಪದಲ್ಲಿ ನಡೆದ ತಾಲೂಕು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಪದಗ್ರಹಣ ಹಾಗೂ ಕಲಾಪ್ರದರ್ಶನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜನಪದ ಸಾಹಿತ್ಯದ ಸೊಗಡು ಬಲು ಇಂಪು. ಜನಪದ ಸಾಹಿತ್ಯ ಓದಲು, ಜನಪದಗೀತೆ ಹಾಡಲು ಕೇಳಲು ಬಲು ಚೆಂದ ಎಂದು ಬಣ್ಣಿಸಿದ ಅವರು ಕನ್ನಡ ನಾಡಿನ ಮಣ್ಣಿನ ಭಾಷೆಯಾಗಿ ತನ್ನ ವೈಭವ-ಸೊಗಡನ್ನು ಬಿಂಬಿಸುತ್ತಿರುವ ಜನಪದ ಸಾಹಿತ್ಯ ಮಾನವ ಸಂಬಂಧಗಳನ್ನು ಬೆಸೆಯುವದಲ್ಲದೆ ವಿಕಾಸದೆಡೆಗೆ ಮುನ್ನಡೆಸುವದು. ಜಾನಪದ ಸಾಹಿತ್ಯ ಜನರ ಹೃದಯವನ್ನು ತಲುಪುತ್ತದೆ. ಜಾತಿ, ಧರ್ಮದ ಬೇಧಭಾವವಿಲ್ಲದೆ ಜಾನಪದ ಜಗತ್ತು ಎಲ್ಲೆಡೆ ವಿಶಾಲವಾಗಿ ವಿಸ್ತರಿಸಿಕೊಂಡಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಎಚ್.ಜಿ.ಕಾಲೇಜಿನ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಮಾತನಾಡಿ, ಜಾನಪದ ಸಾಹಿತ್ಯ ವೈವಿಧ್ಯತೆಯಿಂದ ಕೂಡಿದ ಕಲಾ ಸಂಗಮದ ಬಹು ದೊಡ್ಡ ಭಂಡಾರವಾಗಿದೆ. ಜನರ ಭಾಷೆಯ ಸುಲಿದ ಬಾಳೆ ಹಣ್ಣಿನಂತೆ ಹತ್ತಿರವಾಗಿರುವ ಜಾನಪದ ಸಾಹಿತ್ಯಕ್ಕೆ ಅಂತ್ಯವಿಲ್ಲ ಅದು ನಿತ್ಯ ನಿರಂತರ. ಜನಪದ ಕಲೆ, ಸಾಹಿತ್ಯ ಮತ್ತು ಜಾನಪದ ವಾದ್ಯ ಪರಿಕರಗಳ ಬಗ್ಗೆ ನಮ್ಮ ಯುವಜನಾಂಗಕ್ಕೆ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ ಈ ನಿಟ್ಟಿನಲ್ಲಿ ಪರಿಷತ್ ಈ ಕಾರ್ಯಕ್ಕೆ ಮುಂದಾಗಲಿ. ಜನಪದ ಸೊಗಡನ್ನು, ಗಾದೆ, ಒಗಟು, ಒಡಪು, ಜನಪದ ಕತೆ, ಜನಪದ ಶೈಲಿಯ ಉಡುಗೆ ತೊಡುಗೆ, ಜನಪದ ಹಬ್ಬದ ದಿನಗಳ ಪರಿಚಯ ಮಾಡುವ ಕಾರ್ಯ ಆಗಲಿ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಕ.ಜಾ.ಪ ತಾಲೂಕಾ ಗೌರವಾಧ್ಯಕ್ಷ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಬದುಕಿನ ಅಭಿವ್ಯಕ್ತಿ ರೂಪವೇ ಜಾನಪದ ಸಾಹಿತ್ಯ. ಅಂತಹ ವಿಶಿಷ್ಠ ಪರಂಪರೆಯ ಜಾನಪದ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಜ್ಞಾನ ಸಂಪತ್ತಿಗಿಂತ ನೈತಿಕ ಸಂಪತ್ತು ಶ್ರೇಷ್ಠವಾದುದು ಅದು ಜನಪದ ಸಾಹಿತ್ಯದಲ್ಲಿದೆ ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ರಾಜ್ಯಾಧ್ಯಕ್ಷ ಎಸ್ ಬಾಲಾಜಿ, ಡಾ.ಅನೀಲ ನಾಯಕ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಮಾತನಾಡಿದರು.
ಈ ವೇಳೆ ಮಹಿಳಾ ಘಟಕದ ಅಧ್ಯಕ್ಷೆ ಸುನಂದಾ ಯಂಪುರೆ, ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ ಸಂತೋಷ ಪಾಟೀಲ (ಡಂಬಳ), ಕಸಾಪ ತಾಲೂಕಾಧ್ಯಕ್ಷ ರಾಜಶೇಖರ ಕುಚಬಾಳ, ಅಂಬರೀಶ ಸಾಲಕ್ಕಿ, ಶ್ರೀಮತಿ ಲಲಿತಾಬಾಯಿ ಭೂಸನೂರ ಸೇರಿದಂತೆ ನಗರದ ಗಣ್ಯರು, ಹಿರಿಯರು, ಯುವಕರು, ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

