
ವಿಜಯಪುರ : ಆರೋಗ್ಯ ಸಂಸ್ಥೆಗಳಲ್ಲಿ ಸಂಭವಿಸುವ ಪ್ರತಿಯೊಂದು ಜನನ-ಮರಣ ಘಟನೆಗಳನ್ನು ಕಡ್ಡಾಯವಾಗಿ ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನನ-ಮರಣ ನೊಂದಣಿ ಮತ್ತು ಇ-ಜನ್ಮ ತಂತ್ರಾಂಶದ ಕುರಿತ ನಾಗೀಕರ ನೋಂದಣಿ ಪದ್ಧತಿಯಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನೊಂದಣಾದಿಕಾರಿ-ಉಪ ನೊಂದಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಘಟಿಸುವ ಎಲ್ಲ ಜನನ-ಮರಣ ಘಟನೆಗಳನ್ನು ಕೂಡಲೇ ನಿಗದಿತ ಅವಧಿಯೊಳಗೆ ಅಗತ್ಯ ಕ್ರಮ ವಹಿಸಬೇಕು. ಅನಧಿಕೃತ ಹಾಗೂ ಸುಳ್ಳು ಜನನ ಮರಣ ಪ್ರಮಾಣ ಪತ್ರಗಳು ನೊಂದಣಿಯಾಗದಂತೆ ಸೂಕ್ತ ನಿಗಾ ವಹಿಸುವಂತೆಯೂ ಸಹ ಅವರು ಸೂಚನೆ ನೀಡಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದ ಜನನ ಮತ್ತು ಮರಣ ನೊಂದಣಿಯ ಘಟಕಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಿ ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜನನ-ಮರಣ ಘಟನೆಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ಅಳವಡಿಸುವ ಸಂದರ್ಭದಲ್ಲಿ ನೊಂದಣಾಧಿಕಾರಿ, ಉಪ ನೊಂದಣಾಧಿಕಾರಿಗಳು ತಮ್ಮ ನೊಂದಣಿ ಘಟಕದ ಯೂಸರ್ ಐಡಿ ಮತ್ತು ಪಾಸ್ವರ್ಡ್ಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು. ಡಿಜೀಟಲ್ ಕೀಯನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡು ಜನನ ಮರಣ ಪ್ರಮಾಣಗಳನ್ನು ಕಡ್ಡಾಯವಾಗಿ ಡಿಜಿಟಲ್ ಸಹಿಯ ಮೂಲಕ ವಿತರಿಸುವಂತೆ ಸೂಚಿಸಿದ ಅವರು, ಡಿಜೀಟಲ್ ಕೀ ಗಳನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳಬೇಕು ಎಂದು ಹೇಳಿದರು.
ತಿದ್ದುಪಡಿಯಾದ ಪ್ರಮಾಣ ಪತ್ರಗಳು ಬ್ಲಾಕ್ ಚೇನ್ ಟೆಕ್ನಾಲಜಿಯಲ್ಲಿ ಕಾಣುವುದರಿಂದ ಪ್ರಮಾಣ ಪತ್ರಗಳಲ್ಲಿನ ಮಾಹಿತಿಗಳನ್ನು ತಿದ್ದುಪಡಿ ಮಾಡಲೇಬೇಕಾದ ಪ್ರಕರಣಗಳಲ್ಲಿ ನಿಯಮಾನುಸಾರ ಅಧಿಕೃತ ಆದೇಶಗಳು, ಪೂರಕ ದಾಖಲೆಗಳನ್ನು ಪಡೆದು ಇ-ಜನ್ಮ ತಂತ್ರಾಂಶದಲ್ಲಿ ಅಳವಡಿಸಲು ಕ್ರಮವಹಿಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸುರೇಶ ಚವ್ಹಾಣ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಬಾಬು ಚಾಂದಕವಟೆ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಇಲಾಖೆ ಸಹಾಯಕ ನಿರ್ದೇಶಕ ಅಲ್ತಾಫ್ ಅಹ್ಮದ ಮಣಿಯಾರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

