
ಸಿಂದಗಿ: ಯಾದಗಿರಿ ಜಿಲ್ಲೆಯಲ್ಲಿ ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡದೇ ಸಮಸ್ಯೆ ಮಾಡುತ್ತಿರುವ ಅಧಿಕಾರಿಗಳನ್ನು ವಿಚಾರಿಸಲು ಹುಣಸಗಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಸಮಯದಲ್ಲಿ ಅಮರೇಶ ಕಾಮನಕೇರಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಈ ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕ್ರಮಕೈಗೋಳ್ಳಬೇಕು ಎಂದು ವಿಜಯಪುರ ಜಿಲ್ಲಾ ತಳವಾರ ಪರಿವಾರದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವಾಜಿ ಮೆಟಗಾರ ಆಗ್ರಹಿಸಿದರು.
ನಗರದ ತಹಶೀಲ್ದಾರ್ ಕಛೇರಿಯ ಆವರಣದ ಮುಂದೆ ಕರ್ನಾಟಕ ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿಯ ಅಧ್ಯಕ್ಷ ಹಾಗೂ ತಳವಾರ ಸಮಾಜದ ಹೋರಾಟಗಾರ ಅಮರೇಶ ಕಾಮನಕೇರಿ ಅವರ ಮೇಲಿನ ಹಲ್ಲೆ ಖಂಡಿಸಿ ತಳವಾರ ಸಮಾಜದ ವತಿಯಿಂದ ಶನಿವಾರ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತಳವಾರ ಸಮಾಜವನ್ನು ಎಸ್ಟಿಗೆ ಸೇರಿಸಿ ರಾಜ್ಯಕ್ಕೆ ಆದೇಶ ಕಳುಹಿಸಿದೆ. ರಾಜ್ಯ ಸರ್ಕಾರ ಅಕ್ಟೋಬರ್ 29ರಂದು ಹಿಂದುಳಿದ ವರ್ಗದಿಂದ ತಳವಾರ ತೆಗೆದು ಎಸ್ಟಿ ಪ್ರಮಾಣಪತ್ರ ನೀಡಲು ಅಧಿಕೃತ ಆದೇಶ ಹೊರಡಿಸಿದೆ. ಆದರೆ ಯಾದಗಿರಿಯಲ್ಲಿ ಪ್ರಮಾಣಪತ್ರ ನೀಡದೆ ತೊಂದರೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಮತ್ತೆ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮಲ್ಲು ಸಾವಳಸಾಂಗ ಮಾತನಾಡಿ, ಅಮರೇಶ ಕಾಮನಕೇರಿ ಅವರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು.
ಈ ವೇಳೆ ತಳವಾರ ಸಮಾಜದ ಮುಖಂಡರಾದ ಚಂದ್ರಶೇಖರ ಕೊಟರಗಸ್ತ್ರ, ಶಿವಣ್ಣ ಕೊಟರಗಸ್ತಿ, ಅನಿಲ ಕಡಕೋಳ, ಮಲ್ಲಪ್ಪ ಹಿರೋಳ್ಳಿ, ನಾಗು ತಳವಾರ, ವಿಜಯಕುಮಾರ ಯಾಳವಾರ, ರವಿ ವಾಲೀಕಾರ, ಮಲ್ಲಿಕಾರ್ಜುನ ತಳವಾರ, ರಮೇಶ ಪಾಟೀಲ, ಶಂಕರ ಹಂಚನಾಳ, ಅಣ್ಣಾರಾಯ ವಾಲೀಕಾರ, ಮಡಿವಾಳಪ್ಪ ಮಳಗೇರ, ಪರಶುರಾಮ ಕೊಟರಗಸ್ತಿ, ಶಂಕರಲಿಂಗ ಬೂದಿಹಾಳ ಸೇರಿದಂತೆ ಇತರರು ಇದ್ದರು.

